ಸಂಶೋಧಕರು
ಗಾಯಿ, ಗೋವಿಂದ, ಸ್ವಾಮಿರಾವ್ (1922)

ಗೋವಿಂದ ಸ್ವಾಮಿರಾವ್ ಗಾಯಿ ಅವರು ಶಾಸನತಜ್ಞ, ಇತಿಹಾಸಕಾರ ಮತ್ತು ಭಾಷಾಶಾಸ್ತ್ರಜ್ಞರಾಗಿ ಕರ್ನಾಟಕದ ಸಂಸ್ಕೃತಿಯ ಅಧ್ಯಯನಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ಉತ್ತರ ಕರ್ನಾಟಕದಲ್ಲಿ ಹುಟ್ಟಿದ ಗಾಯಿ ಅವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿಯನ್ನು ಪಡೆದರು. ಅನಂತರ, ಪುಣೆಯ ಡೆಕ್ಕನ್ ಕಾಲೇಜಿನಲ್ಲಿ ಕನ್ನಡ ಶಾಸನಗಳನ್ನು ಕುರಿತು ಅಧ್ಯಯನ ನಡೆಸಲು ವಿದ್ಯಾರ್ಥಿವೇತನವನ್ನು ಪಡೆದು ಎಂಟು, ಒಂಬತ್ತು ಮತ್ತು ಹತ್ತನೆಯ ಶತಮಾನಗಳಿಗೆ ಸೇರಿದ ಶಾಸನಗಳನ್ನು ಆರಿಸಿಕೊಂಡರು. ‘A Historical Grammar of Old Kannada; based entirely on the Kannada Inscriptions of the 8th, 9th and 10th centuries A.D.’ ಎಂಬ ಸಂಶೋಧನ ಪ್ರಬಂಧಕ್ಕಾಗಿ ಪಿಎಚ್.ಡಿ. ಪದವಿಯನ್ನು ಪಡೆದರು. ಗಾಯಿಯವರು, 1943 ರಲ್ಲಿ, ಆರ್ಕಿಯಲಾಜಿಕಲ್ ಸರ್ವೆ ಆಫ್ ಇಂಡಿಯಾದಲ್ಲಿ ಕೆಲಸಕ್ಕೆ ಸೇರಿದರು. ಅಲ್ಲಿ ಬೇರೆ ಬೇರೆ ಬಗೆಯ ಉದ್ಯೋಗಗಳನ್ನು ನಿರ್ವಹಿಸಿ, 1962 ರಲ್ಲಿ ಮುಖ್ಯ ಶಾಸನತಜ್ಞರ(ಚೀಫ್ ಎಪಿಗ್ರಫಿಸ್ಟ್) ಪದವಿಗೆ ಏರಿದರು. 1976 ರಲ್ಲಿ ಆ ಹುದ್ದೆಯಿಂದ ನಿವೃತ್ತರಾದರು. ಅವರು ಪುರಾತತ್ವಶಾಸ್ತ್ರ, ಭಾಷಾಶಾಸ್ತ್ರ, ಇತಿಹಾಸ, ಶಾಸನಶಾಸ್ತ್ರ ಮತ್ತು ಸಂಸ್ಕೃತಿ ಅಧ್ಯಯನಗಳಿಗೆ ಸಂಬಂಧಿಸಿದ ಮುನ್ನೂರಕ್ಕೂ ಹೆಚ್ಚು ಸಂಶೋಧನ ಲೇಖನಗಳನ್ನು ಬರೆದಿದ್ದಾರೆ. ಅವರು ‘South Indian Inscriptions’ ಸರಣಿಯ ಇಪ್ಪತ್ತನೆಯ ಸಂಪುಟದ ಮತ್ತು ‘Epigraphica Indica’ ಸಂಪುಟಗಳ 35, 36, 37 ಮತ್ತು 37ನೆಯ ಸಂಪುಟಗಳ ಸಂಪಾದಕರಾಗಿದ್ದರು. ‘Corpus Inscriptionum Indicarum’ ಸರಣಿಯ ಮೂರನೆಯ ಸಂಪುಟದ ಸಹ ಸಂಪಾದಕರಾಗಿದ್ದರು. ಸಂಸ್ಕೃತ ನಾಟಕಕಾರ ಭವಭೂತಿಯನ್ನು ಕುರಿತ ಪುಸ್ತಕವನ್ನೂ ಅವರು ಬರೆದಿದ್ದಾರೆ.

ಅವರ ತಜ್ಞತೆಯ ಕ್ಷೇತ್ರಗಳ ತಿಳಿವಳಿಕೆಯನ್ನು ಉಪಯೋಗಿಸಿಕೊಂಡು ಕರ್ನಾಟಕ ಅಧ್ಯಯನಗಳಿಗೆ ಮಹತ್ವದ ಕಾಣಿಕೆ ಸಲ್ಲಿಸಿದ್ದಾರೆ. ಅವರು ಬರೆದಿರುವ ಕೃತಿಗಳ ಪಟ್ಟಿಯನ್ನು ಇಲ್ಲಿ ಕೊಡಲಾಗಿದೆ:

  1. ‘A Historical Grammar of Old Kannada; based entirely on the Kannada Inscriptions of the 8th, 9th and 10th centuries A.D.’ 1946, published bu the Post Graduate Research Institute, Deccan Callege, Poona.
  2. ‘Indian Epigraphy: Its Bearing on the History of Art’ (Edited along with Frederick Asher) 1985, )xford and IBH, New Delhi.
  3. ‘Introduction to Indian Epigraphy: with special reference to the development of scripts and languages’, 1986, Central Institute of Indian Languages, Mysore.
  4. ‘Some select inscrptions’, 1990, Agam Kala Prakashan, Delhi.
  5. ‘Studiesin Indian history, epigraphy and culture’, 1992, Srihari Prakashana, Dharawad.
  6. ‘Inscrptions of the early Kadambas’ 1996, Indian Council of Historical Research and pratibha Prakashan, New Delhi.

1990 ರಲ್ಲಿ ಗಾಯಿಯವರಿಗೆ ಒಂದು ಅಭಿನಂದನ ಗ್ರಂಥವನ್ನು ನೀಡಲಾಯಿತು. ಅದರ ಹೆಸರು: ‘Indian History and Epigraphy’. ಕೆ.ವಿ.ರಮೇಶ್, ಎಸ್.ಪಿ. ತಿವಾರಿ ಮತ್ತು ಎಂ.ಜೆ.ಶರ್ಮ ಅವರು ಅದರ ಸಂಪಾದಕರು. ಅದು ನವದೆಹಲಿಯ ಆಗಮಕಲಾ ಪ್ರಕಾಶನದಿಂದ ಪ್ರಕಟವಾಗಿದೆ.

ಮುಖಪುಟ / ಸಂಶೋಧಕರು